Pages

Saturday, April 30, 2011

ಪಾತ್ರ


ಆಸ್ಪತ್ರೆ
-----

ಪ್ರಕೃತಿಯ ವಿಕೋಪಕ್ಕೆ,
ನರರ ಹೀನ ಕೃತ್ಯಕ್ಕೆ,
ದೈವದ ಹೊಡೆತಕ್ಕೆ,
ಬಲಿಯಾದ ನರರ ಬಾಳಿನದೊಂದು
ಆಶಾ ಸೌಧ - ಈ ಆಸ್ಪತ್ರೆ

ಯಮನ ಜೊತೆಗಿನ ಸಮರದಿ ಸೋತವರ,
ಬದುಕುವ ಆಸೆ ಹೊತ್ತ ಶವಗಳ ಸನೀಹದವರ
ನೊಂದ ಹೃದಯಕ್ಕೆ ಕಣ್ಣೀರಿಡದೆ
ಬರೀ ದಿಗ್ಭ್ರಮೆಯ ನೋಟ ಬೀರುತ್ತ,
ತನ್ನೊಳಗೆ ತಾ ಕುಸಿಯದೆ ನಿಂತ
ಜೀವಂತ ಸ್ಮಾರಕ - ಈ ಆಸ್ಪತ್ರೆ

ರೋಗಿ
------

ಬದುಕಿನ ಆಗರದಿ ತೇಲಿ ತೇಲಿ
ಸುಳಿಗೆ ಸಿಲುಕದೆ, ನೆರೆಗೆ ಅಳುಕದೆ
ಪ್ರವಾಹದ ದಾಳಿಗೆ ಸೋಲದೆ
ದಡ ಸೇರಲು ಹೊರಟ
ಅಂಗಹೀನ ಪ್ರಾಣಿ - ಈ ರೋಗಿ

ಸತ್ತ ದೇಹದಿ ಜೀವನ ಬೀಜ ಬಿತ್ತಿ
ಮತ್ತೆ ಹಸಿರುಗನಸನು ಕಾಣುವ
ಸ್ವಪ್ನಲೋಕಿ - ಈ ರೋಗಿ

ನಾಲ್ಕು ಗೋಡೆಗಳ ನಡುವೆ
ಜೀವಗಾಳಿಯನು ಬಯಸಿ
ನಿಟ್ಟುಸಿರು ಹಿಡಿದು
ಬದುಕುವ ಜೀವಿ - ಈ ರೋಗಿ

ವೈದ್ಯ
-----

ಜೀವದಾಸೆಯ ತೊರೆದು ಬಂದಿಹ ಜೀವಕ್ಕೆ
ತನ್ನ  ಮಾತಿನ ಶುಷ್ರುಶೆಯ ನೀಡಿ
ಮಡಿದ ಸಸಿಗೆ ಮತ್ತೊಮ್ಮೆ ಕಸಿ ಮಾಡುವ
ಇಚ್ಛೆ ಹೊತ್ತ ಕೃಷಿಕ - ಈ ವೈದ್ಯ

ಹಣೆಯ ಕೆಂಪು ಮಾಸಿದ ಹೆಣ್ಣಿಗೆ
ಮತ್ತೆ ಹಸಿರ ಉಟ್ಟು-ತೊಟ್ಟು
ನಲಿವ ಸೌಭಾಗ್ಯ
ತಂದವನಂತೆ - ಈ ವೈದ್ಯ 

                   -- ಕಲ್ಯಾಣ ಕುಲ್ಕರ್ಣಿ

No comments:

Post a Comment