ಸತ್ಯಕ್ಕೆ
ಸಾವಿಲ್ಲ ಆಂತಾರೆ, ನಿಜ,
ಯಾಕಂದ್ರೆ ಅದು ಯಾವಾಗಲು ಕೋಮಾ-ನಲ್ಲೆ
ಇರುತ್ತೆ;
ತಾಯಿಗಿಂತ
ಬಂಧುವಿಲ್ಲ ಅಂತಾರೆ, ನಿಜ,
ಅದು... ಅದು... ಹೆಂಡತಿ ಬರೊದಕ್ಕಿಂತಲು
ಮೊದಲು ಮಾತ್ರ;
ಇರೋದು ಬರೀ
ಅತ್ತೆಗೊಂದು ಕಾಲ ಮಾತ್ರ
ಯಾಕಂದ್ರೆ ಸೊಸೆ ಕಾಲ ಬರೋವರೆಗೆ ಅವಳೂ
ಅತ್ತೆ ಆಗಿರ್ತಾಳೆ;
ಮನಸ್ಸಿನ
ಹತೋಟಿ ಕಷ್ಟ ಅಂತಾರೆ, ನಿಜ,
ಆದ್ರೆ ಅದಕ್ಕೆ ಕಡಿವಾಣ ಹಾಕದಿದ್ರೂ
ಕಷ್ಟಾನೇ;
ದೇವರು ಮನದಲ್ಲಿ
ಇರ್ತಾನೆ ಅಂತಾರೆ, ನಿಜ,
ಅದಕ್ಕೆ ಕಲ್ಲು ದೇವರು, ಕಲ್ಲು ಹೃದಯ;
ಮನಸ್ಸಿನ
ನಗ್ನತೆಗೆ ಬುಧಿಯ ಉಡುಗೆ-ತೊಡುಗೆ ಹಾಕಬೇಕು ಅಂತಾರೆ, ನಿಜ,
ಆಗಲೆ ಅದರ ಹುಚ್ಚಾಟ ನಿಂತು ಜೀವನಕ್ಕೊಂದು
ಮೆರಗು ಕೊಡುತ್ತೆ;
ಆಸೆಯೆ ದುಃಖಕ್ಕೆ
ಮೂಲ ಅಂತಾರೆ,
ನಿಜ,
ಈ ವಿಷಯದಲ್ಲಿ ಮದುವೆ ಆಗಿರೋರೆಲ್ಲ ಙ್ನಾನೋದಯ
ಪಡೆದವರೆ;
ಪ್ರೀತಿಗೆ
ಸಾವಿಲ್ಲಾ ಅಂತಾರೆ, ನಿಜ,
ಆದ್ರೆ ಎಲ್ರೂ ಅದನ್ನ ಉಸಿರಾಡಕ್ಕೆ ಬಿಡದೆ
ಕೊಲ್ಲೊ ಪ್ರಯತ್ನ ಮಾಡಿಯಾದ್ರು ಖಚಿತ ಪಡಿಸಿಕೊಳ್ಳಬೇಕು ಅನ್ನೋರೇ;
ಮನಸ್ಸಿಗೂ
ಬುದ್ಧಿಗೂ ಅಜಗಜಾಂತರ ಅಂತಾರೆ, ನಿಜ,
ಬುದ್ಧಿ ಎಲ್ಲವನ್ನು ಸ್ವಾಧೀನ ಮಾಡಿಕೊಳ್ಳಬೇಕು
ಅನ್ನುತ್ತೆ ಆದ್ರೆ ಮನಸ್ಸು ಎಲ್ಲವನು ಗೆಲ್ಲಬೇಕು ಅನ್ನುತ್ತೆ;
--
ಕಲ್ಯಾಣ ಕುಲ್ಕರ್ಣಿ
No comments:
Post a Comment