Pages

Monday, April 04, 2011

ಅಳಲು



ನಿರಂತರ ಸಾಗೋ ಈ ಕಾಲಚಕ್ರಕೂ ಉಂಟು
ಯುಗಾದಿಯ ನವ ಸಂವತ್ಸರ
ನೊಂದ ಹೃದಯದ ಋತುಚಕ್ರದಿ ಮಾತ್ರ
ಕೊನೆಯಾಗದ ದುಸ್ತರ

ಹುಟ್ಟೊದು ಆಕಸ್ಮಿಕ, ಸಾಯೋದು ಖಚಿತ,
ಆದ್ರೆ ನೋವು ಜೀವನ ಸತ್ಯ
ಅರ್ಥ ಇಲ್ಲದ ಬದುಕಿಗೊಂದು ವ್ಯರ್ಥ ಹೃದಯ
ಉಸಿರಿದ್ರೂ ಕನಸಿಲ್ಲದೆ ಬದುಕುವ ಸಮಯ

ದೈವದ ದಾರುಣ ಬೆಂಕಿಯಲಿ ಕರಗಿಹುದು
ಕನಸಿನ ಶೃಂಗಾರ ಮೇಣ
ಕಳೆದುಕೊಂಡಿಹವು ಸ್ಥಿಮಿತತೆ ಇಲ್ಲದ
ಭಾವಗಳು ಉತ್ಸಾಹದ ತ್ರಾಣ

ಕನಸಲಿ ಕಾಲ್ಜಾರಿ ಹೃದಯದ ಕಂದಕದಿ
ಒದ್ದಾಡುತಿದೆ ಮನಸು
ಶಬ್ದಗಳ ಊರುಗೋಲು ಹಿಡಿದ-ಹಿಡಿದು
ಬದುಕುವುದೇ ಇನ್ನು ನನಸು

ಪದಗಳ ಅದ್ದೂರಿ ಸಂತೇಲಿ ಅಗ್ಗವಾಗಿಹುದು
ಭಾವಗಳ ಸಹಜತೆಯ ತೂಕ
ಏನಾದ್ರೆ ಏನಂತೆ ತನ್ನ ತನವ ಬಿಡುವುದೇ
ಈ ಸ್ವಾರ್ಥ ಲೋಕ

ನೆನಪುಗಳಿಗೆ ನೀಡಿಹುದು ಆಮಂತ್ರಣ
ಈ ಇರುಳ ಏಕಾಂತ
ಬೆಳದಿಂಗಳ ಈ ಹೃದಯ ತಾಂಡವಕೆ
ಜಗವೇ ಶಾಂತ

ತಂಪಿಹುದು ಆದ್ರೆ ದಾರಿ ಕಾಣದ ಕತ್ತಲಲಿ
ಸಾಗದ ಪಯಣ
ಬೆಳಕಿಹುದು ಆದ್ರೆ ಬೆರೆಯದ ಹೃದಯಗಳಿಗೆ
ಮುಖವಾಡಗಳು ಕಾರಣ

ಹೋರಾಟದ ಹಾದಿಯಲಿ ಮುಗಿಯದಿರಲಿ ಈ ಯೌವ್ವನ
ತನು ಸೋತರು ಸೋಲದಿರಲಿ ಮನಸ್ಸಿನ ಧ್ಯಾನ ||

- ಕಲ್ಯಾಣ ಕುಲ್ಕರ್ಣಿ

No comments:

Post a Comment