Pages

Sunday, November 13, 2011

ಸತರಂಗಿ ಜೀವನದ ಮನರಂಗಿ ರೂಪಗಳು…


ಈ ಬಾಳು ಅಥವಾ ಜೀವನದ ಬಗ್ಗೆ ನಾವೆಲ್ಲಾ ಆಗಾಗ ತುಂಬಾನೆ ಯೋಚಿಸಿ ಇದರ ಕೊನೆ-ಮೊದಲು ಅರ್ಥ ಆಗದೆ ಅದರ ಪಾಡಿಗೆ ಅದನ್ನ ಬಿಟ್ಟು ಜಾಗ ಖಾಲಿಮಾಡಿದ್ದುಂಟು. ನನಗೂ ಇದರ ಅನುಭವ ಸುಮಾರು ಸಾರಿ ಆಗಿದೆ. ಅದಕ್ಕೆ ಈ ಜಗದ ಪ್ರಯೋಗಾಲಯದಲ್ಲಿ (Laboratory) ಜೀವನದ ಮೇಲೆ ಕೆಲವು ಸಂಶೋಧನೆಗಳನ್ನ (experiment) ಗಳನ್ನ ಮಾಡಿ, ಸೂಕ್ಷ್ಮದರ್ಶಕದ (microscope) ಕೆಳಗಿಟ್ಟು ನೋಡಿ, ಜೀವನದ ವಿವಿಧ ರೂಪಗಳನ್ನ ಪರೀಕ್ಷಿಸಿ ನಮ್ಮ ಪ್ರಭಂದ (thesis) ಬರೆಯೋಣ ಬನ್ನಿ.

ಜೀವನ ಒಂದು ಸಿನೇಮಾ ಅನ್ಕೊಂಡ್ರೆ,

ನಿಮಗೆ ಯವತ್ತಾದ್ರು ನಿಮಗಾಗಿ ಯಾರಾದ್ರು ಕಥೆ ಬರೀಬೇಕು, ಪ್ಲೆ-ಬ್ಯಾಕಲ್ಲಿ ಹಾಡು ಹೇಳಬೇಕು, ನಿಮ್ಮ ಜೊತೆ ಸಿನೆಮಾ ಮಾಡಬೇಕು ಅಂತ ಅನ್ನಿಸಿದ್ದಿದೆಯಾ? ಅಥವಾ ಯಾವಾಗಲು ಅನ್ನಿಸುತ್ತಾ?

ಒಂದು ರಹಸ್ಯ ಹೇಳ್ತಿನಿ ಕೇಳಿ, ಈ ಜಗವೇ ಥಿಯೇಟರ, ಇಲ್ಲಿ ನಮ್ಮದೆ ಒಂದು ಚಿತ್ರ, ನಮ್ಮ ಹೆಸರೇ ಆ ಚಿತ್ರದ ಹೆಸರು ಕೂಡ, ಈ ಚಿತ್ರದಲ್ಲಿ (ಸಿನೇಮಾದಲ್ಲಿ/cinema) ನಾವೇ ನಾಯಕ(hero) /ನಾಯಕಿ (heroin) ಯರು. ಆ ದೇವರು ನಮಗೆಂದೇ ವಿಶಿಷ್ಠವಾಗಿ ಬರೆದ ಕಥೆ ಈ ನಮ್ಮ ಜೀವನ. ಈ ಪಾತ್ರಕ್ಕೆ ನಾವೇ ಒಪ್ಪೋದು ಅಂತ ನಮ್ಮನ್ನೆ ಆಯ್ಕೆ (ಸೆಲೆಕ್ಟ್/select) ಮಾಡಿರೋದು, ಬಣ್ಣ ಹಾಕ್ಸಿರೋದು.

ಭೂಮಿಯ ಮೇಲಿನ ನಮ್ಮ ಮೊದಲ ಉಸಿರಿಂದ ಹಿಡಿದು ಕೊನೆಯ ಬಡಿತದ ವರೆಗೂ ನಾವೇನೆ ಲೈಮ್-ಲೈಟ್ (ಫ಼ೋಕಸ್/focus) ನಲ್ಲಿರೋದು. ನಮ್ಮ ಮಾತುಗಳೇ ಸಂಭಾಷಣೆ (dialogues), ನಮ್ಮ ನಡೆ ನುಡಿಗಳೇ ಸಾಹಸ (ಆಕ್ಷನ್/action). ನಮ್ಮ ಚಿತ್ರ ಸೋಲದ ಹಾಗೆ (ಫ಼್ಲೊಪ್/flop ಆಗದ ಹಾಗೆ) ನಾವೇ ನೋಡಿಕೊಳ್ಳಬೇಕು.

ಇದರಲ್ಲಿ ಕ್ಷಣ-ಕ್ಷಣಕ್ಕೆ ಬದಲಾಗೊ ರೋಮಾಂಚನ (thrill) ಇದೆ, ಜೀವನದ ಜೊತೆ ಗೊದ್ದಾಟದ ಸಾಹಸ (action)  ಇದೆನಕ್ಕು ನಗಿಸೊ ಹಾಸ್ಯ (comedy) ಇದೆ, ಮನಸ್ಸನ್ನ ತೋಯಿಸೊ ದುಃಖ (tragedy) ಇದೆ, ಸೊತು-ಗೆಲ್ಲೊ ಕಲೆ (art) ಇದೆ, ಕನಸಗಳ ಬೆನ್ನಟ್ಟೊ ಛಲ (daring) ಇದೆ, ಎರಿಳಿತಗಳ ಸರಿಗಮ (music) ಇದೆ, ಸುಖದ ಸಂಗೀತ - ದುಃಖದ ಮೌನ ರಾಗ ಇದೆ, ಸಂಭ್ರಮದ ನೃತ್ಯ (dance) ಇದೆ, ಎಲ್ಲರನ್ನು ಜೊತೆಗಿರಿಸೊ ಕೌಟುಂಬಿಕ ನಾಟಕ (family drama) ಇದೆ, ಕನಸುಗಳ ನಿರ್ದೇಶನ (direction) ಇದೆ, ಪ್ರಯತ್ನಗಳ ಹೂಡಿಕೆ (investment/production) ಇದೆ, ಅನುಭವಗಳ ಲಾಭ (profit) ಇದೆ.

ಜೀವನ ಒಂದು ಪಾಠಶಾಲೆ ಅನ್ಕೊಂಡ್ರೆ,

ಶಾಲೆ/ಕಾಲೇಜ್ ಗಳು ಜೀವನ ಹೊರೆಯೊ ವಿದ್ಯೆ ಕಲಿಸಿದ್ರೆ, ಜೀವನದ ಪಾಠಶಾಲೇಲಿ ಬದುಕು ರೂಪಿಸೊ ಕಲೇನ ಕಲಿಸೋದು. ಜಗದ ವಿದ್ಯಾಲಯದಲ್ಲಿ ವಿದ್ಯೆ ಕಲಿತು ಪದವಿ ಪಡೆದುಕೊಂಡ್ರೆ, ಬಾಳಿನ ವಿಶ್ವ ವಿದ್ಯಾಲಯದಲ್ಲಿ ಅನುಭವಗಳ ಪದಕ ಪಡೆದುಕೊಳ್ಳೊದು. ವಿದ್ಯೆ ಬಾಳಿಗೆ ಅರ್ಥ ಕೊಟ್ಟ್ರೆ, ಅನುಭವಗಳ ಪಾಠ ಜೀವನಕ್ಕೆ ಅರ್ಥ ಕೊಡುತ್ತೆ. ವಿದ್ಯೆ ಜೀವಕ್ಕೆ ಜೀವನ ಕೊಟ್ಟ್ರೆ, ಅನುಭವಗಳು ಜೀವನಕ್ಕೆ ಜೀವ ಕೊಡುತ್ವೆ. ಜೀವನ್ವಿದ್ಯೆ... , ಆದಿ ಮಾನವರಿಂದ ಮಾನವಂತರಾಗಿ ಬದುಕೊ ದಾರಿ ತೊರಿಸಿ ಕೊಡುತ್ತೆ.

ಜೀವನ ಒಂದು ಲೆಕ್ಕಾಚಾರ ಅನ್ಕೊಂಡ್ರೆ,

ಇದು ಸುಖ-ಸಂತೋಷಗಳ ಸಂಕಲನ (addition), ವ್ಯಥೆ-ದುಃಖಗಳ ವ್ಯವಕಲನ (subtraction), ಸಂಕಲ್ಪ-ಪ್ರಯತ್ನಗಳ ಗುಣಾಕಾರ (multiplication), ಸೋಲು-ತಪ್ಪುಗಳ ಭಾಗಾಕಾರ (division), ನೆನಪುಗಳ ಭಾಗಲಬ್ಧ (quotient), ಅನುಭವಗಳ ಶೇಷ (reminder). ಕೆಲವೊಮ್ಮೆ ಅರ್ಥವಾಗದ ಬೀಜಗಣಿತ (algebra), ಉಪಯೋಗಕ್ಕೆ ಬಾರದ ಸೂತ್ರಗಳು)/ಮೂಢ ಆಚರಣೆಗಳು (formulas/values), ಅವಗಳನ್ನ ಪಾಲಿಸೊದ್ರಲ್ಲೆ (memorise) ಕಳೆದುಹೋಗುತ್ತೆ ಜೀವನ.

ಜೀವನ ಒಂದು ಬೋಧಿ ವೃಕ್ಷ ಅನ್ಕೊಂಡ್ರೆ,

ಬುದ್ಧನ ಬೋಧಿ ವೃಕ್ಷದ ಙ್ನಾನವನ್ನ, ಬಸವಣ್ಣನ ಅನುಭವ ಮಂಟಪದ ಅನುಭವಗಳಿಗಳನ್ನ ಮತ್ತು ಪುರಂದರರ ವೈರಗ್ಯದ ವಾಣಿಯನ್ನ, ನಮ್ಮ ಜೀವನದ ಪರೀಕ್ಷೆಗೊಡ್ಡಿ ಬದುಕಿನ ನಿಜ ಅರ್ಥದ ಸಾಕ್ಷಾತ್ಕಾರ ಮಾಡಿಸೊ, ಆದಿ-ಅಂತ್ಯಗಳಿಲ್ಲದ (ನಮ್ಮ ಜೀವನವಿಡಿ ಆವರಿಸಿದ) ಈ ಜೀವನವೇ ಬೋಧಿ ವೃಕ್ಷ. ಜೀವನವೆಂಬ ಕುರುಕ್ಷೇತ್ರದಲ್ಲಿದ್ದು ಅನುಭವಗಳ ಗೀತೋಪದೇಶ ಪಡೆದ ನಾವುಗಳೇ ನಮ್ಮ ಪಾಲಿಗೆ ನಿಜ ಸಂತರು, ಬುದ್ಧರು, ಅರ್ಜುನರು. ಇಲ್ಲಿ ದಿನಕ್ಕೊಂದು ಹೊಸ ಪಾಠ, ಹೊಸ ಪ್ರ್ಯಾಕ್ಟಿಕಲ್, ಹೊಸ ಅವಿಷ್ಕಾರ. ಬದುಕಿಗಿಂತ ದೊಡ್ಡ ಙ್ನ್ಯಾನ ಭಂಡಾರ ಇನ್ನೊಂದಿಲ್ಲ.
  
ಜೀವನ ಒಂದು ಜ್ಯೋತಿಷ್ಯ ಶಾಸ್ತ್ರ ಅನ್ಕೊಂಡ್ರೆ,

ಭೂಮಿ ಮೇಲೆ ಸಿಗದಿರೋದನ್ನ ಗೃಹಗಳಲ್ಲೆಲ್ಲೊ ಹುಡುಕೋದು, ಹಣೆ ಮೇಲೆ ಚಮಕಾಯಿಸದ ನಕ್ಷತ್ರಗಳನ್ನ ಆಗಸದಲ್ಲೆಲ್ಲೊ ಕನೆಕ್ಷನ್ ಕೊಡಿಸೋದು, ಅಯೋಗ್ಯರ  ದೋಷಗಳನ್ನ ಕುಂಡಲಿಲಿ ಸರಿಪಡಿಸೋಕ್ಕೆ ಹೆಣಗಾಡೋದು, ಗುಣ-ಸ್ವಭಾವಗಳನ್ನ ರಾಶಿಯ ಶಾಂತಿಯಿಂದ ಬದಲಯಿಸೊಕ್ಕೆ ಪ್ರಯತ್ನಿಸೋದು, ಹಸ್ತದಲ್ಲಿಲ್ಲದ ಅದೃಷ್ಟನ ಅಂಗೈಲಿ ಕೊರಿಸೋದು, ಮನಸ್ಸೊಲಿಸಕ್ಕಾಗದೋರು, ತಮ್ಮನ್ನೇ ತಿದ್ದಿಕೊಳ್ಳಕ್ಕಾಗದೋರು, ಗೃಹ-ನಕ್ಷತ್ರಗಳಿಗೆ ಒಲಿಸೋದ್ರಲ್ಲಿ ಜೀವನ ಸವಿಸೋದು.

ಜೀವನ ಒಂದು ಮರುಕಳಿಸೊ ತಿಂಗಳ ಬಾಬತ್ತಾದ್ರೆ,

ಸಂಬಳದ ಮೊದಲ ದಿನವೇ ಹುಟ್ಟು, ಚಿಂತೆಗಳಿಲ್ಲದ ಬಾಲ್ಯವೇ ಮೊದಲ ವಾರ, ಕಂಡ-ಕಂಡದ್ದನ್ನೆಲ್ಲ ಬೇಡೊ/ಬಯಸೊ ಯೌವ್ವನವೇ ಎರಡನೇ ವಾರ, ಬ್ಯಾಲನ್ಸ್ ತಪ್ಪಿದ ಚುರುಕು ತಗಲಿ, ಲೆಕ್ಕ ಹುಡುಕೊ ವಯಸ್ಕರ ಘಟ್ಟವೇ ಮೂರನೇ ವಾರ, ಕಳಕೊಂಡು ಹುಡುಕೊ ವೃದ್ಧಾಪ್ಯವೇ ನಾಲ್ಕನೇ ವಾರ. ತಿಂಗಳ ಕೊನೆ ನಾಲ್ಕು ದಿನಗಳೇ ಉಸಿರಾಟಕ್ಕಾಗಿ ಬಡಿದಾಡೊ ಕೋಮಾ.

ಜೀವನ ವ್ಯಾಪ್ತಿ

ಜೀವನ ಕೆಲವೊಬ್ಬರಿಗೆ ಎರಡು ಹೊತ್ತಿಗೆ ಹೊಟ್ಟೆ ಹೊರೆಯೊಕ್ಕೆ ನಡೆಸೊ ದೈನಂದಿನ ಸಮರ. ಮತ್ತೆ ಕೆಲವೊಬ್ಬರಿಗೆ ಅತಿರೇಕದ ಚೆಲ್ಲಾಟ, ಇನ್ನೂ ಕೆಲವರಿಗೆ ಎರಡು ತುತ್ತನ್ನೂ ಅರಗಿಸಿಕೊಳ್ಳಕ್ಕಾಗದ ಗ್ರಹಚಾರ. ಕೆಲವರಿಗೆ ಮೈ ಮುಚ್ಚಿಕೊಳ್ಳಕ್ಕೆ ಪಡೊ ಪರದಾಟ, ಆದ್ರೆ ಇನ್ನ ಕೆಲವರಿಗೆ ಪ್ರದರ್ಶನದ ಹುಚ್ಚಾಟ. ಕೆಲವರಿಗೆ ಆಸರೆಯ ಹುಡುಕಾಟ, ಇನ್ನ ಹಲವರಿಗೆ ಸೂರಿನ (ಮನೆಗಳ) ವ್ಯಾಪಾರ.

ಜೀವನ ಪ್ರೀತಿಯ ಸೆಲೆ, ಉಸಿರಿನ ಬಲೆ, ಸೃಷ್ಟಿಯ ಮಲೆ, ಬ್ರಹ್ಮನ ತಲೆ, ಬದುಕುವ ಕಲೆ, ಹೊಟ್ಟೆ ತುಂಬಿಸೊ ಒಲೆ. ಇದರ ವ್ಯಾಪ್ತಿ ಅಳಿಯೋಕ್ಕೆ ಅಗದು. ಕೋಟಿ ಜೀವರಾಶಿಗೆ ಕೋಟಿ ರೀತಿಯಾಗಿ ಕಾಣಿಸುತ್ತೆ.

ಜೀವನ ಸೂತ್ರ

ಇತ್ತೀಚೆಗೆ ಒಮ್ಮೆ ದೂರದರ್ಶನದಲ್ಲಿ ಒಬ್ಬ ವಯೋವೃದ್ಧ ಸಾಹಿತಿಗಳ ಸಂದರ್ಷನ ಪ್ರಸಾರವಾಗಿತ್ತು. ನನಗೂ ಆಕಸ್ಮಿಕವಾಗಿ ನೋಡೊ ಅವಕಾಶ ಸಿಕ್ಕಿತ್ತು. ಅದರಲ್ಲಿ ಅವರಿಗೆ ನಿಮಗೆ ೮೮ ವಯಸ್ಸಾದ್ರೂ ನಂದದ ನಿಮ್ಮ ಉತ್ಸಾಹ ಮತ್ತು ಆರೋಗ್ಯದ ಗುಟ್ಟೇನು ಅಂತ ಕೇಳಿದಾಗ, ಅವರು ಹೇಳಿದ ಉತ್ತರ ಮಾತ್ರ ತುಂಬಾ ಮಾರ್ಮಿಕವಾಗಿತ್ತು. ಅವರು ಹೇಳಿದ್ದು, "ನಾನು, ದಿನಾಲು ಸ್ವಲ್ಪ ಪ್ರಾಣಾಯಾಮ ಮಾಡ್ತೆನೆ, ಮಿತ ಆಹಾರ ಸೇವಿಸ್ತೆನೆ, ಆದ್ರೆ ಎಲ್ಲಕ್ಕಿಂತಲು ಮುಖ್ಯವಾಗಿ ನಾನು ಯಾರ ಬಗ್ಗೇನೂ, ಯಾವ ವಿಷಯದ ಬಗ್ಗೇನೂ ಅವಶ್ಯಕತೆಗಿಂತ ಜ್ಯಾಸ್ತಿ ಚಿಂತಿಸಲ್ಲ ಮತ್ತೆ ಯಾರಾದ್ರು ನನ್ನ ಬಗ್ಗೆ ಏನು ಅನ್ಕೋತಾರೆ ಅಂತಲೂ ಯೋಚಿಸಲ್ಲ, ಯಾಕೆ ಗೊತ್ತಾ? ಯಾಕಂದ್ರೆ, ನಾವು ಯಾರ ಬಗ್ಗೆ ತಲೆ ಕೆಡಿಸ್ಕೊಂಡಿರ್ತಿವೋ ಅವರು ಆರಮಾಗಿ ಮಸಾಲೆ ದೋಸೆ ತಿನ್ನತಾ ಕಾಲ ಕಳೀತಾ ಇರಬಹುದು" ಅಂತ. ಇದನ್ನ ನಮ್ಮ ಜೀವನದಲ್ಲೂ ಅಳವಡಿಸಿಕೊಂಡ್ರೆ ಒಳ್ಳೆದಲ್ವಾ? ಹಾಗೇನೆ ನಮ್ಮ ಜೀವನದಲ್ಲೂ ನೆಮ್ಮದಿ ಬೇಕಾದ್ರೆ ಪ್ರೊಬ್ಲಮ್ಸಗಳಿಗೆ ಆಗಾಗ ಮಸಾಲೆ ದೋಸೆ ತಿನ್ನಿಸಿ ಮರೆತು ಬಿಡಬೇಕು ಅಂತ.

ನಾವು ಎಷ್ಟೊಂದು ಸ್ಪೂರ್ತಿಯ ಸೆಲೆಗಳನ್ನ, ನುಡಿಮುತ್ತುಗಳನ್ನ ಓದಿರ್ತಿವಿ, ಅವುಗಳಿಂದ ಜೀವನದಲ್ಲಿ ಸ್ಪೂರ್ತಿ ಪಡಕೊಂಡಿರ್ತಿವಿ, ತಪ್ಪುಗಳನ್ನ, ನಡವಳಿಕೆಗಳನ್ನ ತಿದ್ದಿಕೊಂಡಿರ್ತಿವಿ. ಅಂಥದ್ರಲ್ಲಿ ಈಗ ಒಂದು ನುಡಿ ಮುತ್ತು ನೆನಪಿಗೆ ಬರ್ತಾ ಇದೆ. "ನೆಲಕ್ಕೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ" ಅನ್ನೋದು. ತಪ್ಪು ಮಾಡಿ ಆ ತಪ್ಪನ್ನ ಸಮರ್ಥಿಸಿ ಕೊಳ್ಳೊದಕ್ಕೆ ಇದನ್ನ ಬಳಸೋದು ಅಂತ ಅಲ್ಲ. ಜೀವನದ ದಾರೀಲಿ ಎಲ್ಲರು ಎಡವೊದು ಸಹಜ. ಆದ್ರೆ ಈ ಥರ ಜೀವನದಲ್ಲಿ ತಪ್ಪು ಹೆಜ್ಜೆ ಇಟ್ಟು ಎಡವಿ ನೆಲಕ್ಕೆ ಬಿದ್ರು, ಮೀಸೆ ಮಣ್ಣಾಗಲಿಲ್ಲ (ಈ ಸೋಲು ಕೊನೆಯಲ್ಲಾ) ಅಂತ ಎದ್ದು ಮತ್ತೆ ಇನ್ನೂ ಹೆಚ್ಚಿನ ಹುಮ್ಮಸ್ಸು ಮತ್ತು ಉತ್ಸಾಹದಿಂದ ಮುನ್ನಡೆದಾಗ ಮಾತ್ರ ಜೀವನದ ಓಟದಲ್ಲಿ ವಿಜಯಲಕ್ಷ್ಮಿ ಓಲಿಯೋದು ಅಂತ.

ಜೀವನ ರೂಪಿಸಿದವರು

ಜೀವನ ನಮ್ಮದಾದ್ರು ಅದನ್ನ ರೂಪಿಸೋದ್ರಲ್ಲಿ ಅದೆಷ್ಟೋ ಸದೃಶ್ಯ-ಅದೃಶ್ಯ ಕೈಗಳ ಕೈಂಕರ್ಯ ಇದೆ. ಜೀವ ಕೊಟ್ಟ ತಾಯಿ, ಜೀವನ ಕೊಟ್ಟ ತಂದೆ, ಜೀವನಕ್ಕೆ ಅರ್ಥ ಕೊಟ್ಟ ಗುರು, ಕೈ ಬಿಡದ ಸ್ನೇಹಿತರು, ಎಡೆ-ಬಿಡದೆ ಜೊತೆ ನಡೆಯೊ ಸಂಗಾತಿ, ನಮ್ಮನ್ನೇ ಆದರ್ಶ ಅನ್ಕೊಂಡ ಮಕ್ಕಳು, ಇದರ ಜೊತೆಗೆ ಜೀವನಕ್ಕೆ ಒಂದು ಟಚ (touch) ಕೊಟ್ಟು ಹೋಗೊ ಅದೆಷ್ಟೋ ಜೀವಗಳು, ಇವರೆಲ್ಲ ನಮ್ಮ ಅಸ್ತಿತ್ವಕ್ಕೆ ಕಾರಣರು.

ಇನ್ನು ಬದುಕು ಬದಲಿಸಿ ಹೋದ ಪ್ರಸಂಗಗಳು, ಜೀವನ ದಾರಿಯಲಿ ಸಾಧನೆಗಳ, ಸಾಹಸ ಗಾಥೆಗಳ ಅಳತೆಗೋಲಾಗಿ/ಗುರುತಿಗಾಗಿ (measurement) ಅಂತ ನೆಟ್ಟ ಮೈಲಿಗಲ್ಲುಗಳು (kilometre/distance boards). ಘನ ಹೃದಯವನ್ನ ಕರಗಿಸಿ ಕಣ್ಣಲ್ಲಿ ಹರಿಸಿದ ವಿಲಕ್ಷಣ ನೆನಪುಗಳು, ಆ ಹಳೆಯದನ್ನ ಕಾಣದ ಹಾಗೆ ಮರೆಸಿ, ತಿರುವು ನೀಡಿದ ಆ ಜೀವನ ದಾರಿಯ ದಾರಿ-ಫಲಕಗಳು ಎಲ್ಲವೂ ಸ್ಮರಣಿಯವೆ.


ಕೊನೆಯದಾಗಿ, ಆ ದೇವರು. ಅವನೇ ಮಿತ್ರ, ಅವನೇ ಸಖ, ಅವನೇ ಸರ್ವಸ್ವ. ಎಲ್ಲರೂ ದೂರ ಸರಿದಾಗ, ನಮ್ಮ ಚಿತ್ತದ ಗಾಢ ನಿದ್ರೆಯಿಂದೆದ್ದು ಬಂದು ಜೊತೆ ನಡೆಯೋನು. ಗ್ರೀಷ್ಮದ ಬದುಕಿಗೆ ವರ್ಷದ ಹನಿಗರೆದವನು, ಶರದದ ರೋಧನಕೆ ಹೇಮಂತನ ಅಪ್ಪುಗೆಯ ಆಸರೆಯಾದವನು, ಶಿಶಿರದ ಏಕಾಂತಕೆ ವಸಂತದ ಬಳಗವಾದವನು, ಆಸೆಗಳ ಅನಾವೃಷ್ಟಿಗೆ ಆನಂದದ ಅತಿವೃಷ್ಟಿ ಸುರಿದವನು, ಅದೃಷ್ಟದ ಹಿಂಗಾರಿಗೆ ಭರವಸೆಯ ಮುಂಗಾರದವನು ಅವನು. ಅವನಿಲ್ಲದೆ ಬದುಕಿಲ್ಲ.


ಜೀವನದಲ್ಲಿ ಕಷ್ಟ - ಸುಖಗಳ ಪಾತ್ರ

ಜೀವನದ ವಿವಿಧ ಮುಖಗಳಲ್ಲಿ ಒಂದು ಮುಖ, ಸುಖ, ಸಂತೋಷ, ಹಣ, ಸಂಪತ್ತು ಗಳ ಬೆನ್ನಟ್ಟೊದು. ನಮಗಾಗಿ ಅಂತ ಒಮ್ಮೆ, ನಮ್ಮವರಿಗಾಗಿ ಅಂತ ಕೆಲವೊಮ್ಮೆ, ಈ ಭಗೀರಥ ಪ್ರಯತ್ನಗಳು (ಸುಖನ ಮನ-ಮನೆಗಳಿಗೆ ತರೊ ಯತ್ನಗಳು) ನಡೀತಾನೆ ಇರುತ್ವೆ. ಆದ್ರೆ ಕೇಳಿದಾಗಲೆಲ್ಲ, ಕೇಳಿದ್ದು, ಕೇಳಿದಷ್ಟು, ಸಿಕ್ಕ ಬಿಟ್ರೆ, ಇವೆಲ್ಲ ಒಂದೆರಡು ದಿವಸ ಖುಷಿ ಕೊಟ್ಟು, ನಂತರ ಜೀವನ ಬೋರ್ ಹೊಡಿಯುತ್ತೆ. ಜೀವನ ಅರಳದೆ ಇದ್ದಿದ್ರಲ್ಲೆ ತೃಪ್ತಿ ಪಟ್ಟುಕೊಳ್ಳುತ್ತೆ.

ಬದುಕು ಸದಾ ಹಾಸಿಗೆ ಇದ್ದಷ್ಟು ಕಾಲು ಚಾಚೋದಾಗದೆ, ಕಾಲಿದ್ದಷ್ಟು (ಇನ್ನು ಒಂದೆರಡು ಮೊಳ) ಹಾಸಿಗೆನ್ನೇ ಜಾಸ್ತಿ ಮಾಡೋದು ಆಗಬೇಕು. ಇದನ್ನ ಮಾಡೊವಾಗ ಇತರರ ಹಿತಕ್ಕೆ ಧಕ್ಕೆಯಾಗದ ಹಾಗೆ ನ್ಯಾಯಾನ ದಾರಿದೀಪ ಮಾಡಿಕೊಂಡಿದ್ರೆ ಸಾಕು.

ಈ ಜೀವನದ ಕಲ್ಲಿಗೆ ಆಗಾಗ ಉಳಿಯ ಪೆಟ್ಟು (ಕಷ್ಟ) ಬಿದ್ದಾಗ್ಲೆ ಸುಂದರ ಶಿಲೆಯಾಗಿ ಅರಳೊದು. ಸುಖ ನಮಗೆ ವಿಲಾಸಿಗಳಾಗಿಸಿದ್ರೆ, ದುಃಖ ನಮಗೆ ಸಾಹಸಿಗಳಾಗಿಸುತ್ತೆ. ಸುಖ ಇರಲಿ ಆದ್ರೆ ಕಷ್ಟಗಳು ಬೇಡ ಅಂದ್ರೆ ಹ್ಯಾಗೆ? ಕಷ್ಟಗಳು ಬೇಡ ಅನ್ನೊದಕ್ಕಿಂತಲು ಕಷ್ಟಗಳನ್ನೆದುರಿಸೊ ಶಕ್ತಿ ಕೊಡು ಅಂತ ಆ ದೆವರಲ್ಲಿ ಕೇಳಿಕೊಳ್ಳಬೇಕು ಅಷ್ಟೆ. 

ಜೀವನ ಸರಾಂಶ

ಬದುಕಿನ ರೂಪಗಳು ಅನೇಕ. ಆದಿ-ಅಂತ್ಯ ಗಳಿಲ್ಲದ, ಕೊನೆ-ಮೊದಲಿಲ್ಲದ ಜೀವನದ ಸಂಪೂರ್ಣ ವಿಮರ್ಷೆ ಸಾಧ್ಯಾನಾ? ನಿಜ, ಅದು ಅಸಾಧ್ಯ ಅನ್ನೊದು ನನಗೂ ಗೊತ್ತು. ನನ್ನ ಉದ್ದೇಶ ಜೀವನ ಸಾಗರದ ಹನಿಗಳನ್ನ ಎಣಿಸೋದು ಖಂಡಿತ ಆಗಿಲ್ಲ. ನನ್ನ ಉದ್ದೇಶ ನನ್ನ ಬೊಗಸೆಯಲ್ಲಿ ಹಿಡಿದ ಹನಿಗಳ ಬಗ್ಗೆ ನನ್ನ ತರ್ಕಕ್ಕೆ ನಿಲುಕಿದ ರೀತಿಲಿ ಹೇಳೋದು. ಅಂದ್ರೆ, ನಾ ಕಂಡ ಜೀವನದ ವಿಮರ್ಷೆ ಮಾಡೋದು ಅಷ್ಟೆ. ನನ್ನ ಕಣ್ಣ ಬಿಂಬದಲ್ಲಿ ಮೂಡಿದ ಈ ಜಗದ, ಜೀವನದ ಬಣ್ಣಗಳ ವಿಮರ್ಷೆ ಮಾಡೋದು ಅಂತ.

ಪ್ರತಿ ಕ್ಷಣ ನಮ್ಮ ಜೊತೆ ಇದ್ದು ಮನಸ್ಸು ಗೆಲ್ಲೋ ಜೀವನ, ಪಂಚರಂಗಿ, ಸತರಂಗಿ, ನೌರಂಗಿ, ಎಲ್ಲವೂ ಹೌದು. ನನ್ನ ಬಣ್ಣಗಳಿಗೆ ಬೇಕಾದ್ರೆ ನಿಮ್ಮ ಬಣ್ಣನೂ ಸೇರಿಸಿ, ಜೀವನ ಅಲಂಕರಿಸಿ ಓಕುಳಿ ಆಡಬಹುದು,.............. ಎನಂತಿರಾ?                                                                                                                               


ನಿಮ್ಮ ಹತ್ತಿರದ ಬಣ್ಣದ ವ್ಯಾಪಾರಿಗಳು,
ಕಲ್ಯಾಣ ಕುಲ್ಕರ್ಣಿ

No comments:

Post a Comment